Site icon SportsKannada ಸ್ಪೋರ್ಟ್ಸ್ ಕನ್ನಡ

ರೋಹಿತ್ ಶರ್ಮಾ.. ನೀನು ನಿಜಕ್ಕೂ ಧರ್ಮರಾಯನೇ..!

ಆ ಸುದ್ದಿ ಕೇಳಿದ ನಂತರ ರೋಹಿತ್ ಶರ್ಮಾ ಬಗ್ಗೆ ಇದ್ದ ಗೌರವ ನೂರು ಪಟ್ಟು ಹೆಚ್ಚಾಗಿದೆ.
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಘೋಷಣೆ ಮಾಡಿದ್ದ ₹125 ಕೋಟಿ ನಗದು ಬಹುಮಾನ ಆಟಗಾರರು, ಕೋಚಿಂಗ್ ಸ್ಟಾಫ್, ಸಪೋರ್ಟಿಂಗ್ ಸ್ಟಾಫ್ ಸಹಿತ ವಿಶ್ವಕಪ್ ತಂಡದಲ್ಲಿದ್ದ ಅಷ್ಟೂ ಮಂದಿಗೆ ತಲುಪಿದೆ.
ಆಟಗಾರರಿಗೆ ತಲಾ ₹5 ಕೋಟಿ, ಕೋಚಿಂಗ್ ಸ್ಟಾಫ್’ಗೆ ತಲಾ ₹2.5 ಕೋಟಿ, ಸಪೋರ್ಟಿಂಗ್ ಸ್ಟಾಫ್’ಗೆ ತಲಾ ₹2 ಕೋಟಿ, ಮೀಸಲು ಆಟಗಾರರಿಗೆ ತಲಾ ₹1 ಕೋಟಿ ಹಣವನ್ನು ನೀಡಲಾಗಿದೆ.
ಅಂದ ಹಾಗೆ ಸಪೋರ್ಟಿಂಗ್ ಸ್ಟಾಫ್’ಗೆ, ಅಂದರೆ ಮೂವರು ಫಿಸಿಯೊಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್’ಗಳು, ಇಬ್ಬರು masseurs ಮತ್ತು ಇಬ್ಬರು ಸ್ಟ್ರೆಂತ್ & ಕಂಡಿಷನಿಂಗ್ ಕೋಚ್’ಗಳಿಗೆ ನಗದು ಬಹುಮಾನ ನೀಡುವ ವಿಚಾರದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಬಿಸಿಸಿಐ ಅಧಿಕಾರಿಗಳ ಮಧ್ಯೆ ಸಣ್ಣದೊಂದು ಜಟಾಪಟಿ ನಡೆದಿರುವ ಬಗ್ಗೆ ವರದಿಯಾಗಿದೆ.
ಸಪೋರ್ಟಿಂಗ್ ಸ್ಟಾಫ್’ಗೆ ₹2 ಕೋಟಿ ಕೊಡಲು ಬಿಸಿಸಿಐ ಸಿದ್ಧವಿರಲಿಲ್ಲ. ‘’ಅವರಿಗೇಕೆ ಅಷ್ಟೊಂದು ದುಡ್ಡು’’ ಎಂಬ ಪ್ರಶ್ನೆಯನ್ನು ಬಿಸಿಸಿಐ ಅಧಿಕಾರಿಗಳು ಎತ್ತಿದ್ದಾರೆ. ಈ ಸಂದರ್ಭದಲ್ಲಿ ತನ್ನ ತಂಡದ ಸಪೋರ್ಟಿಂಗ್ ಸ್ಟಾಫ್ ಪರವಾಗಿ ಗಟ್ಟಿಯಾಗಿ ನಿಂತವನು ನಾಯಕ ರೋಹಿತ್ ಶರ್ಮಾ.
‘’ವಿಶ್ವಕಪ್ ಗೆಲುವಿನ ಹಿಂದೆ ಸಹಾಯಕ ಸಿಬ್ಬಂದಿಯ ಪಾತ್ರ ಎಷ್ಟಿದೆ ಎಂಬುದು ನನಗೆ ಗೊತ್ತು. ಅವರು ವರ್ಷಗಳ ಕಾಲ ಹಗಲೂ-ರಾತ್ರಿ ಇದಕ್ಕಾಗಿ ಶ್ರಮ ಪಟ್ಟಿದ್ದಾರೆ. ಅವರಿಲ್ಲದಿದ್ದರೆ ನಾವು ವಿಶ್ವಕಪ್ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಏನು ಸಿಗಬೇಕೋ ಅದು ಸಿಗಲೇಬೇಕು. ಇಲ್ಲವಾದಲ್ಲಿ ನಾನು ನನ್ನ ಪಾಲಿಗೆ ಬರುವ ₹5 ಕೋಟಿ ಹಣವನ್ನು ಅವರಿಗೆ ಹಂಚಿ ಬಿಡುತ್ತೇನೆ’’ ಎಂದು ಬಿಟ್ಟಿದ್ದಾನೆ ರೋಹಿತ್.
ವಿಶ್ವ ಚಾಂಪಿಯನ್ ತಂಡದ ನಾಯಕ ಯಾವಾಗ ಹೀಗೆ ಕಡ್ಡಿ ಮುರಿದಂತೆ ಹೇಳಿ ಬಿಟ್ಟನೋ, ಬಿಸಿಸಿಐ ಮುಂದೆ ಬೇರೆ ಆಯ್ಕೆಯೇ ಉಳಿಯಲಿಲ್ಲ.
ಸಾಮಾನ್ಯವಾಗಿ ಈ ಸಹಾಯಕ ಸಿಬ್ಬಂದಿಯ ಬಗ್ಗೆ  ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಇಷ್ಟೊಂದು ಗಟ್ಟಿ ಧ್ವನಿಯಲ್ಲಿ ಮಾತನಾಡುವುದಿಲ್ಲ. ‘ನಮಗೇಕೆ ಇಲ್ಲದ ಉಸಾಬರಿ’ ಎಂದು ಜಾರಿಕೊಳ್ಳುವವರೇ ಜಾಸ್ತಿ.
ಆದರೆ ರೋಹಿತ್ ಶರ್ಮಾ ತೆರೆಯ ಹಿಂದಿನ ಹೀರೋಗಳ ಪರವಾಗಿ ನಿಂತು ನಿಜವಾದ ಹೀರೋ ಆಗಿದ್ದಾನೆ.
ಒಬ್ಬ ನಾಯಕನೆಂದರೆ ಹೀಗಿರಬೇಕು..!
Exit mobile version