SportsKannada | ಸ್ಪೋರ್ಟ್ಸ್ ಕನ್ನಡ

ಉಡುಪಿ-ಖ್ಯಾತ ಕರಾಟೆ ಪಟು,ತೋನ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ನಿಧನ.

ಉಡುಪಿ ಬಿಲ್ಲವ ಸಮುದಾಯದ ಯುವ ಮುಂದಾಳು,ಕರಾಟೆ ಸಂಘದ ರಾಜ್ಯಾಧ್ಯಕ್ಷ,ಕಾಂಗ್ರೆಸ್ ಮುಖಂಡ,ತೋನ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಅವರು ನಿಧನ ಹೊಂದಿದರು.ಅವರು ಕೆಲವು ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ಈ ಹಿಂದೆ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಗ್ರಾಮದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೂ ಪಕ್ಷಭೇದವನ್ನು ದೂರವಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೋನ್ಸೆ ಪಂಚಾಯತ್ ನ ಸರ್ವಸದಸ್ಯರು ಅಭಿವೃದ್ಧಿ ಕಾರ್ಯದಲ್ಲಿ ಒಂದಾಗುವಂತೆ ಮಾಡಿದ್ದರು.
ಅವಿವಾಹಿತರಾಗಿದ್ದ ನಿತ್ಯಾನಂದ ಇವರು ಓರ್ವ ಉತ್ತಮ ಕರಾಟೆಪಟು.ಉಡುಪಿಯ ಒಳಕಾಡು ಶಾಲೆಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದರು.
ಕ್ರೀಡಾಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಕೂಡ ಪಾತ್ರರಾಗಿದ್ದರು.ಮೃತರು ತಂದೆ,ತಾಯಿ,ಸಹೋದರಿ,ಇಬ್ಬರು ಸಹೋದರರನ್ನು ಅಗಲಿದ್ದಾರೆ.
Exit mobile version