SportsKannada | ಸ್ಪೋರ್ಟ್ಸ್ ಕನ್ನಡ

ಕರಾವಳಿ‌ ರಿಯಲ್ ಫೈಟರ್ಸ್ ಪಿತ್ರೋಡಿಗೆ ಒಲಿದ ಸ್ವರ್ಣ ಖಚಿತ ವೆಂಕಟರಮಣ ಟ್ರೋಫಿ-2020

ವೆಂಕಟರಮಣ ಸ್ಪೋರ್ಟ್ಸ್ ಕ್ಲಬ್(ರಿ) ಪಿತ್ರೋಡಿ ಆಯೋಜಿಸಿದ್ದ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಕರಾವಳಿ ರಿಯಲ್ ಫೈಟರ್ಸ್ ಪಿತ್ರೋಡಿ” ತಂಡ ಗೆದ್ದುಕೊಂಡಿತು. ಫೈನಲ್ ನಲ್ಲಿ ಬಿ.ಎ ಕಾಪು ತಂಡವನ್ನು ಸೋಲಿಸಿ ಸ್ವರ್ಣ ಖಚಿತ ವೆಂಕಟರಮಣ ಟ್ರೋಫಿ-2020 ತನ್ನದಾಗಿಸಿಕೊಂಡಿತು.

ವಿಶೇಷವಾಗಿ ನೀಡಲಾದ ಶಿಸ್ತುಬದ್ಧ ತಂಡ ಪ್ರಶಸ್ತಿಯನ್ನು ಹಿಂದೂಸ್ತಾನ್ ಬೆಂಗಳೂರು ಪಡೆಯಿತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಕರಾವಳಿ ರಿಯಲ್ ಫೈಟರ್ಸ್ ನ ಶಾಜಿಲ್,ಬೆಸ್ಟ್ ಬ್ಯಾಟ್ಸ್‌ಮನ್ ಅದೇ ತಂಡದ ಜಾನ್,ಪ್ರಕೃತಿ ವಿನಾಯಕದ ಪರ್ವೇಜ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರೆ,ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಮಿತ್ ಪಡೆದುಕೊಂಡರು.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮಾದಕ ದ್ರವ್ಯ ಮುಕ್ತ ಸಮಾಜ ಸಂದೇಶ ಸಾರುವ ರ‌್ಯಾಲಿಯನ್ನುದ್ದೇಶಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಸಮಾಜದಲ್ಲಿ ಬದುಕಲು ಆಸ್ತಿ ಅಂತಸ್ತಿಗಿಂತ ಆರೋಗ್ಯವೇ ಮುಖ್ಯ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗೂ ಮಾದಕದ್ರವ್ಯ ಮುಕ್ತ ಸಮಾಜ ಕಾಣಬಹುದು. ಆ ನಿಟ್ಟಿನಲ್ಲಿ ವೆಂಕಟರಮಣ ಪಿತ್ರೋಡಿ ಸಂಸ್ಥೆ ಕ್ರೀಡೆಯ ಜೊತೆ ಸಾಮಾಜಿಕ ಕಳಕಳಿಯ ಅನೇಕ ಕಾರ್ಯಕ್ರಮಗಳನ್ನು ಕಳೆದ ಮೂರು ದಶಕಗಳಿಂದ ಅತ್ಯಂತ ಯಶಸ್ವಿಯಾಗಿ ಸಂಘಟಿಸುತ್ತಿದೆ ಎಂದು ಹೇಳಿದರು.

ಕರ್ನಾಟಕ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ವಲಯದ ಅಧ್ಯಕ್ಷ ಶ್ರೀ ಶರತ್ ಶೆಟ್ಟಿಯವರು ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ದಾರಿಯಲ್ಲಿ ಬೆಳೆಸಿ,ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಬಹುದು ಹಾಗೂ 31 ವರ್ಷಗಳಿಂದ ವೆಂಕಟರಮಣ ಸಂಸ್ಥೆ ಕರ್ನಾಟಕದಲ್ಲೇ ಮಾದರಿ ಸಂಸ್ಥೆಯಾಗಿ ಬೆಳೆದ ನಿಂತಿದ್ದು,ಪಡುಬಿದ್ರಿ ಫ್ರೆಂಡ್ಸ್ ಜೊತೆಗಿನ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿದರು.

ಪ್ರಸಾದ್ ನೇತ್ರಾಲಯದ ವೈದ್ಯರು ಮಾತನಾಡಿ “ದೃಷ್ಟಿ ಇಲ್ಲದ ಬದುಕು ಶೂನ್ಯ,ನೇತ್ರದಾನ ಮಾಡಿ ಮನುಷ್ಯ ಸತ್ತ ಮೇಲು ಬದುಕಬಹುದು.ವೆಂಕಟರಮಣ ಪಿತ್ರೋಡಿ ತಂಡ ಕ್ರಿಕೆಟ್ ಪಂದ್ಯಾವಳಿಯ ನಡುವೆಯೂ ತಂಡದ 50 ಮಂದಿ ಸದಸ್ಯರು ನೇತ್ರದಾನ ಪ್ರಕ್ರಿಯೆಗಳಿಗೆ ಸಹಿ ಮಾಡುವುದರ ಮೂಲಕ ಅಂಧರ ಬದುಕನ್ನು ಬೆಳಗಿಸುವ ಯೋಜನೆಯಲ್ಲಿ ತೊಡಗಿರುವುದು ಶ್ಲಾಘನೀಯವೆಂದು ನೇತ್ರದಾನದ ಮಹತ್ವವನ್ನು ವಿವರಿಸಿದರು.

ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ರಿಯಾಜ್ ಪಳ್ಳಿ ಮಾತನಾಡಿದ ಶಿಸ್ತಿಗೆ ಇನ್ನೊಂದು ಹೆಸರಿದ್ದರೇ ಅದು ವೆಂಕಟರಮಣ ಪಿತ್ರೋಡಿಯ ತಂಡ, ವೆಂಕಟರಮಣ ಸ್ಪೋಟ್ಸ್೯ & ಕಲ್ಚರಲ್ ರಿ. ಪಿತ್ರೋಡಿಯವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಯಶಸ್ವಿ ಫಿಶ್ಮಿಲ್ & ಆಯಿಲ್ ಕಂ ಪಿತ್ರೋಡಿ ಸಾಧು ಸಾಲ್ಯಾನ್, ಉದ್ಯಾವರ, ಕರಾವಳಿ ಫ್ರೀಜರ್ಸ್ ಕೋಟ ಲೋಹಿತ್ ಕುಮಾರ್ ಪಿತ್ರೋಡಿ, ಪಿತ್ರೋಡಿ ಉದ್ಯಮಿ ಯೋಗೀಶ ಕೋಟ್ಯಾನ್, ಪಿತ್ರೋಡಿ ವೆಂಕಟರಮಣ ಸ್ಪೋಟ್ಸ್೯ & ಕಲ್ಚರಲ್ ರಿ. ಸಂತೋಷ ಕುಂದರ್. ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂದಿರ ಅಧ್ಯಕ್ಷ ವಾಸು ಸಾಲ್ಯಾನ್, ಪಿತ್ರೋಡಿ ಸ್ಪೋಟ್ಸ್೯ & ಕಲ್ಚರಲ್ ರಿ. ಗೌರವ ನಿರ್ದೇಶಕರು
ಜಿತೇಂದ್ರ ಶೆಟ್ಟಿ ಉದ್ಯಾವರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶರಣ್ ಜೆ. ಪುತ್ರನ್, ಗಂಗಾಧರ ಜಿ. ಕಡೆಕಾರ್, ವಿಜಯ್ ಕುಮಾರ್ ರಾಮಕೃಷ್ಣ ಆಚಾರ್ಯ ಕೋಟ, ಕು! ಮಾನ್ಯ ಪಿತ್ರೋಡಿ ಸುಧೀರ್ ಶೆಟ್ಟಿ ಬ್ರಹ್ಮಗಿರಿ, ಹರಿಶ್ಚಂದ್ರ ಕೋಟ್ಯಾನ್ ಪಿತ್ರೋಡಿ ಹಾಗೂ ಉದ್ಯಾವರದ ಕ್ರಿಕೆಟ್ ಪ್ರತಿಷ್ಟೆಯನ್ನು ಉಳಿಸಿದ ಹೆಮ್ಮೆಯ ತಂಡಗಳಿಗೆ ಹಾಗೂ ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ಸಂಸ್ಥೆಯ ಹೆಮ್ಮೆಯ ರಕ್ತದಾನಿ ಸದಸ್ಯರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸುರೇಶ್ ಪಿತ್ರೋಡಿ ಸ್ವಾಗತಿಸಿ, ರಾಜಶೇಖರ – ಉಡುಪಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

ಆರ್.ಕೆ‌.ಆಚಾರ್ಯ ಕೋಟ
ಚಿತ್ರ ಕೃಪೆ- ಸುರಭಿ ಸ್ಟುಡಿಯೋ ‌ಬ್ರಹ್ಮಗಿರಿ
‌‌‌‌‌

Exit mobile version