SportsKannada | ಸ್ಪೋರ್ಟ್ಸ್ ಕನ್ನಡ

ಹಟ್ಟಿಯಂಗಡಿ ವಸತಿ ಶಾಲೆಯಲ್ಲಿ ಎಐಸಿಎಸ್ ಅಂತರ್ ಶಾಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕುಂದಾಪುರ: ಉಡುಪಿ ಜಿಲ್ಲೆಯ ಸಿಬಿಎಸ್ಇ ಮತ್ತು ಐಸಿಎಸ್ಇ ಅಂತರ್ ಶಾಲಾಮಟ್ಟದ 2022-23ನೇ ಸಾಲಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ದಿನಾಂಕ ಆಗಸ್ಟ್ 3ರಂದು ಜರುಗಿತು.
ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಂದಾಪುರದ ವಿನಾಯಕ ಕ್ಲೀನಿಕ್ನ ಒರ್ಥೋಪಿಡಿಕ್ ಸರ್ಜನ್ ಡಾ. ಶಿವಕುಮಾರ್ ಜಿ ಅವರು ಆಗಮಿಸಿದ್ದರು.
ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟ-ಊಟ ಮತ್ತು ಪಾಠಗಳಲ್ಲಿ ನಾವು ಆಟಕ್ಕೇ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ. ಆಟ ನಮ್ಮ ಬದುಕಿನಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ದಿನದಲ್ಲಿ ಎರಡು ತಾಸು ಆಟವಾಡಿದರೂ ಸಾಕು, ಮನಸ್ಸು ಪ್ರಪುಲ್ಲತೆಯಿಂದ ತುಂಬಿರುತ್ತದೆ. ನಿತ್ಯ ನಿಗದಿತ ಸಮಯಗಳಲ್ಲಿ ಆಟದ ಮೂಲಕ ದೈಹಿಕ ಕಸರತ್ತು ನೆಡೆಸುವುದರಿಂದ ಸದೃಢ ದೇಹವನ್ನು ಪಡೆಯುವುದರೊಂದಿಗೆ ಮಾನಸಿಕ ಸ್ಥಿರತೆಯನ್ನು ಸಾಧಿಸಬಹುದು. ಹಾಗಾಗಿ ಪಠ್ಯಕಲಿಕೆಯೊಂದಿಗೆ ಕ್ರೀಡೆಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು”ಎಂದು ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಈ ಕ್ರೀಡಾಕೂಟದ ಸಂಚಾಲಕರೂ ಮತ್ತು  ಬ್ರಹ್ಮಾವರ ಲಿಟಲ್ ರಾಕ್ ಶಾಲೆಯ ದೈಹಿಕ ಶಿಕ್ಷಕರೂ ಆದ ಸಾಜು ಎಂ ಎ ಮಾತನಾಡಿ ಕೋವಿಡ್ ಮಹಾಮಾರಿಯ ನಂತರ ಇಂದು ಎಲ್ಲಾ ಭಾಗಗಳಲ್ಲೂ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಂಡಿರುವುದು ಶುಭ ಸೂಚನೆಯಾಗಿದೆ. ಇದರಿಂದ ಮಕ್ಕಳಲ್ಲಿನ ವಿಶೇಷ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಅನುಕೂಲವಾಗಿದೆ. ಈ ಕ್ರೀಡಾಕೂಟದಲ್ಲಿ ಎಲ್ಲಾ ಸ್ಪರ್ಧಿಗಳು ಕ್ರೀಡಾಸ್ಪೂರ್ತಿಯಿಂದ ಎದುರಾಳಿಗಳನ್ನು ಎದುರಿಸಬೇಕು. ಆಟದ ನಿಯಮಗಳನ್ನು ಗೌರವಿಸುವುದರೊಂದಿಗೆ ಸಹಸ್ಪರ್ಧಿಗಳನ್ನು ಗೌರವಿಸಬೇಕು ಎಂದು ತಿಳಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರೂ ಶರಣ ಕುಮಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭಕ್ಕೆ ತ್ರಾಸಿಯ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ  ಫಾದರ್ ಮಾಕ್ಸಿಮ್ ಡಿಸೋಜಾ ಮತ್ತು ಕುಂದಾಪುರ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ  ಶಂಕರ ನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ಪಾರಿತೋಷಕಗಳನ್ನು ವಿತರಿಸಿದರು.
 ಈ ಸ್ಪರ್ಧೆಯಲ್ಲಿ ಸುಮಾರು 14 ತಂಡಗಳು ಭಾಗವಹಿಸಿದ್ದು, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಾರದ ವಸತಿ ಶಾಲೆ, ಉಡುಪಿ ಪ್ರಥಮ ಹಾಗೂ ಮಾಧವ ಕೃಪಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಣಿಪಾಲ ದ್ವಿತೀಯ ಸ್ಥಾನವನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಲಿಟಲ್ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ ಪ್ರಥಮ ಹಾಗೂ ಡಾನ್ ಬಾಸ್ಕೊ ಇಂಗ್ಲೀಷ್ ಮೀಡಿಯಂ ಸ್ಕೂಲ್, ಶಿರ್ವ ದ್ವಿತೀಯ ಸ್ಥಾನವನ್ನು ಪಡೆಯಿತು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ  ಆನಂದತೀರ್ಥ ವಿದ್ಯಾಲಯ ಪಾಜಕ, ಉಡುಪಿ ಪ್ರಥಮ ಹಾಗೂ ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ದ್ವಿತೀಯ ಸ್ಥಾನವನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ  ಪ್ರಥಮ ಹಾಗೂ  ಡಾನ್ ಬಾಸ್ಕೊ  ಸ್ಕೂಲ್, ಹೊಸಾಡು ತ್ರಾಸಿ ದ್ವಿತೀಯ ಸ್ಥಾನವನ್ನು ಪಡೆಯಿತು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಮರ್ಥ ಎಸ್, (ಶಾರದ ವಸತಿ ಶಾಲೆ, ಉಡುಪಿ) ಬಾಲಕಿಯರ ವಿಭಾಗದಲ್ಲಿ ಸಾಚಿ ಶೆಟ್ಟಿ (ಲಿಟಲ್ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ), 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕ್ಷಿತಿಜ್ (ಆನಂದತೀರ್ಥ ವಿದ್ಯಾಲಯ ಪಾಜಕ, ಉಡುಪಿ) ಬಾಲಕಿಯರ ವಿಭಾಗದಲ್ಲಿ ತನ್ವಿ ಶೆಟ್ಟಿ (ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ) ಕ್ರೀಡಾಕೂಟದ ಅತ್ಯುತ್ತಮ ಆಟಗಾರರು ಎಂಬ ಪ್ರಶಸ್ತಿಗೆ ಭಾಜನರಾದರು.
ಈ ಸಂದರ್ಭದಲ್ಲಿ ಶಾಲಾ ಅಡಳಿತಾಧಿಕಾರಿ ವೀಣಾ ರಶ್ಮೀ ಎಂ, ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು. ಸಹ ಶಿಕ್ಷಕರಾದ ಶ್ರೀಮಧು ಕೆ ಎಲ್ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ  ಕುಮಾರಿ ಸಂಜನಾ ವಿ ಎಮ್ ಸ್ವಾಗತಿಸಿದರು. ಕುಮಾರಿ ಸೌಜನ್ಯ ಮೋರ್ಕಿ ವಂದಿಸಿದರು ಹಾಗೂ ಕುಮಾರಿ ಪ್ರೀಯಾ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
Exit mobile version