
ಟೆನಿಸ್ ಬಾಲ್ ಕ್ರಿಕೆಟ್ನಿಂದ ಟೆಸ್ಟ್ ಕ್ರಿಕೆಟ್ವರೆಗೆ: ಆಕಾಶ್ ದೀಪ್ನ ಅದ್ಭುತ ಹಾದಿ
ಬಿಹಾರದ ಡೆಹ್ರಿ ಹಳ್ಳಿಯಿಂದ ಆರಂಭಗೊಂಡ ಕ್ರಿಕೆಟ್ಪ್ರಯಾಣ, ಬಂಗಾಳದ ರಾಜ್ಯ ತಂಡ, ಅಂತಿಮವಾಗಿ ಟೀಂ ಇಂಡಿಯಾ ಟೆಸ್ಟ್ ತಂಡದವರೆಗೆ… ಇದು ಆಕಾಶ್ ದೀಪ್ ಎಂಬ ಯುವ ಬೌಲರ್ನ ಹೋರಾಟದ ಕಥೆ.
2016ರಲ್ಲಿ ಕೇವಲ 19ರ ಹುಡುಗನಾಗಿದ್ದ ಆಕಾಶ್ ದೀಪ್, ಕ್ರಿಕೆಟ್ ಕನಸು ಬೆನ್ನತ್ತಿ ಬಿಹಾರದಿಂದ ಕೋಲ್ಕತ್ತಾಗೆ ಬಂದಿದ್ದ. ಲೆದರ್ ಬಾಲ್ ಕ್ರಿಕೆಟ್ನಲ್ಲಿ ನೆಲೆಗೊಳ್ಳಬೇಕೆಂಬ ಕನಸು ಇಟ್ಟುಕೊಂಡಿದ್ದ. ಅವನಿಗೆ ಹಣದ ಕೊರತೆಯೂ ಇತ್ತು. ಬದುಕು ಸಾಗಿಸಲು ಅವನು ಆಯ್ಕೆಮಾಡಿದ ದಾರಿ — ಟೆನಿಸ್ ಬಾಲ್ ಕ್ರಿಕೆಟ್.
ಬಂಗಾಳದ ರಾಜ್ಯ ತಂಡದಲ್ಲೂ ಸ್ಥಾನ ಸಿಗದಿದ್ದ ಆಕಾಶ್ ದೀಪ್, ಬದುಕಿಗಾಗಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಹೊರಟ. ಸಿಕ್ಕ ಸಿಕ್ಕ ಅವಕಾಶಗಳಲ್ಲಿ ಬೌಲಿಂಗ್ ಪ್ರದರ್ಶಿಸಿದ. ಕೋಲ್ಕತ್ತಾದಲ್ಲಿ ಸಣ್ಣ-ಪುಟ್ಟ ಪಂದ್ಯಗಳಲ್ಲಿ ಆಟವಾಡುತ್ತಿದ್ದ ಆಕಾಶ್ ದೀಪ್ನ ಪ್ರತಿಭೆ ದೂರವರೆಗೂ ಹರಡಿತು. ಅವನ ಸ್ವಿಂಗ್ ಬೌಲಿಂಗ್ ಗೆಳೆಯರನ್ನು, ಆಯೋಜಕರನ್ನು, ವಿದೇಶಿಯರನ್ನೂ ಆಕರ್ಷಿಸಿತು. ಈ ನಡುವೆ ಮಂಗಳೂರಿನ ಇಕ್ಬಾಲ್ ಕಾವೂರು ಎಂಬ ಉದ್ಯಮಿ ಅವನ ಪ್ರತಿಭೆಯನ್ನು ಗುರುತಿಸಿ, ಟೆನಿಸ್ ಬಾಲ್ ಟೂರ್ನಿಗಳಿಗಾಗಿ ದುಬೈಗೆ ಕರೆದುಕೊಂಡು ಹೋದರು.
ಆಕಾಶ್ ದೀಪ್ ತನ್ನ ಪಾಸ್ಪೋರ್ಟ್ ಮಾಡಿಸಿಕೊಂಡದ್ದು ಕೂಡ ಈ ಕ್ರಿಕೆಟ್ ಟೂರ್ನಿಗಳ ನಿಮಿತ್ತವೇ. ದುಬೈ, ಶಾರ್ಜಾ, ಸೌದಿ ಅರೇಬಿಯಾದ “ಈಸ್ಟರ್ನ್ ಬ್ಲೂ” ತಂಡಗಳಲ್ಲಿ ಹಾಗೂ ಮಂಗಳೂರಿನ ಉಡುಪಿ ಪ್ರೀಮಿಯರ್ ಲೀಗ್ನಲ್ಲಿ 2016ರಲ್ಲಿ ನಡೆದ 25 ಲಕ್ಷ ಬಹುಮಾನ ಮೊತ್ತದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ತನ್ನ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ.
ಕೂಡಲೇ ಕುಂದಾಪುರದ ಟಾರ್ಪೆಡೋಸ್ ಟೂರ್ನಿಯಲ್ಲೂ ಗಮನಸೆಳೆದಿದ್ದ ಆಕಾಶ್, ಬಳಿಕ ಬಂಗಾಳದ ರಾಜ್ಯ ತಂಡದಲ್ಲಿ ಸ್ಥಾನ ಪಡೆದು ತನ್ನ ಪ್ರೋಗ್ರೆಸ್ ಮುಂದುವರೆಸಿದ. ಇದು 9 ವರ್ಷಗಳ ಹಿಂದಿನ ಕಥೆ. ಕಳೆದ ವಾರ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಗಮನ ಸೆಳೆದ.
ಇತ್ತೀಚೆಗೆ ಎಡ್ಜ್ಬಾಸ್ಟನ್ನಲ್ಲಿ ಭಾರತಕ್ಕೆ ಟೆಸ್ಟ್ ಗೆಲುವು ತರಲು ನೆರವಾದ ಈ ಯುವಕ, ಸಾಕ್ಷಾತ್ ಕ್ರಿಕೆಟ್ನ ಅಗ್ನಿಪಥದಲ್ಲಿ ನಡೆಯುತ್ತಾ ಬಂದಿದ್ದಾನೆ. ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಹುಡುಗ, ಇಂದು ಭಾರತ ತಂಡದಲ್ಲಿ ಟೆಸ್ಟ್ ಬೌಲರ್. ಕನಸು ಸಾಕಾರಗೊಳ್ಳಲು ನಂಬಿಕೆ, ಶ್ರಮ, ಧೈರ್ಯ ಇದ್ದರೆ ಸಾಕು ಎನ್ನುವುದಕ್ಕೆ ಆಕಾಶ್ ದೀಪ್ ಜೀವಂತ ಉದಾಹರಣೆ.
ತೀರಾ ಸಾಮಾನ್ಯ ಹಿನ್ನೆಲೆಯಿಂದ ಬಂದ ಯುವಕ, ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಹುಡುಗನೊಬ್ಬ, ಇಂದು ಭಾರತೀಯ ಟೆಸ್ಟ್ ತಂಡದ ಸದಸ್ಯ. ಈ ಕಥೆ, ಕ್ರಿಕೆಟ್ ಕೇವಲ ಆಟವಷ್ಟೇ ಅಲ್ಲ, ಅದು ಹೋರಾಟ, ತ್ಯಾಗ, ಮತ್ತು ಶ್ರದ್ಧೆಯ ಪಾಠ ನೀಡುವ ಪಾಠಶಾಲೆ ಎನಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
