Site icon SportsKannada ಸ್ಪೋರ್ಟ್ಸ್ ಕನ್ನಡ

ಆಟಗಾರನಾಗಿ ಸಾಧ್ಯವಾಗದ್ದನ್ನು ಕೋಚ್ ಆಗಿ ಸಾಧಿಸಲು ನಿಂತಿದ್ದಾರೆ ಅಮೋಲ್ ಮಜುಮ್ದಾರ್..! 

ಆಟಗಾರನಾಗಿ ಸಾಧ್ಯವಾಗದ್ದನ್ನು ಕೋಚ್ ಆಗಿ ಸಾಧಿಸಲು ನಿಂತಿದ್ದಾರೆ ಅಮೋಲ್ ಮಜುಮ್ದಾರ್..! 

20 ವರ್ಷಗಳ ಪ್ರಥಮದರ್ಜೆ ಕ್ರಿಕೆಟ್.. 11 ಸಾವಿರಕ್ಕೂ ಹೆಚ್ಚು ರನ್.. 30 ಶತಕಗಳು.. ಆಡಿದ ಮೊಟ್ಟ ಮೊದಲ ರಣಜಿ ಪಂದ್ಯದಲ್ಲೇ 260 ರನ್’ಗಳ ಇನ್ನಿಂಗ್ಸ್.

ಅರ್ಹತೆಯೂ ಇತ್ತು, ಯೋಗ್ಯತೆಯೂ ಇತ್ತು.. ಯೋಗ ಇರಲಿಲ್ಲ ಅಷ್ಟೇ.. ಭಾರತ ಪರ ಆಡಲಾಗದ ಕೊರಗಿನೊಂದಿಗೆ ಕ್ರಿಕೆಟ್’ಗೆ ವಿದಾಯ ಹೇಳಿದ್ದ ದೇಶೀಯ ಕ್ರಿಕೆಟ್ ದಿಗ್ಗಜ ಈಗ ವಿಶ್ವಕಪ್ ಹತ್ತಿರ ಬಂದು ನಿಂತಿದ್ದಾರೆ. ಅವರು ಅಮೋಲ್ ಮಜುಮ್ದಾರ್.

ಮುಂಬೈನ ಅಮೋಲ್ ಮಜುಮ್ದಾರ್ ದೇಶೀಯ ಕ್ರಿಕೆಟ್ ಕಂಡ ದಿಗ್ಗಜರಲ್ಲಿ ಒಬ್ಬರು. ಅಮೋಲ್ ಎಂತಹ ಪ್ರತಿಭೆಯೆಂದರೆ ಮುಂಬೈ ಪರ ಇವರ ಆಟವನ್ನು ನೋಡಿದ್ದವರು ‘ಮತ್ತೊಬ್ಬ ತೆಂಡೂಲ್ಕರ್’ ಎಂದು ಉದ್ಘರಿಸಿದ್ದರಂತೆ. ಅಮೋಲ್ ಮಜುಮ್ದಾರ್ ಒಳಗಿದ್ದ ದೈತ್ಯ ಪ್ರತಿಭೆಗೆ ಇದಕ್ಕಿಂತ ಸರ್ಟಿಫಿಕೇಟ್ ಬೇಕಿಲ್ಲ.

1994ರಲ್ಲಿ ಭಾರತ ಅಂಡರ್-19 ತಂಡದ ಉಪನಾಯಕ.. 1995ರಲ್ಲಿ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಜೊತೆ ಭಾರತ ಎ ತಂಡಕ್ಕೂ ಆಯ್ಕೆಯಾಗಿದ್ದವರು ಅಮೋಲ್ ಮಜುಮ್ದಾರ್.

ದೇಶೀಯ ಕ್ರಿಕೆಟ್’ನಲ್ಲಿ 20 ವರ್ಷಗಳ ಕಾಲ ರಕ್ತ ಬಸಿದರೂ ಭಾರತ ಪರ ಆಡುವ ಕನಸು ಕೊನೆಗೂ ನನಸಾಗಲೇ ಇಲ್ಲ.. ನಮ್ಮ ಕರ್ನಾಟಕದ ಜೆ.ಅರುಣ್ ಕುಮಾರ್, ಮಧ್ಯಪ್ರದೇಶದ ಜಲಜ್ ಸಕ್ಸೇನಾ, ಗುಜರಾತ್’ನ ಪ್ರಿಯಾಂಕ್ ಪಾಂಚಾಲ್’ರದ್ದೂ ಇದೇ ಕಥೆ.. 

ಅಮೋಲ್ ಮಜುಮ್ದಾರ್ ವಿಚಾರದಲ್ಲಿ ಕ್ರಿಕೆಟ್ ಕ್ರೂರವಾಗಿತ್ತು.. ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಿಗೆ ಸರಿಸಮನಾಗಿ ನಿಂತಿದ್ದ ಪ್ರತಿಭೆ.. ನಿರಂತರ ಪ್ರಯತ್ನಗಳ ಹೊರತಾಗಿಯೂ ಭಾರತ ಪರ ಆಡಲಾಗಲೇ ಇಲ್ಲ.. ಆದರೆ ಅದೇ ಕ್ರಿಕೆಟ್ ಈಗ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಅಮೋಲ್’ಗೆ ಕರುಣಿಸಿದೆ, ಭಾರತ ಮಹಿಳಾ ತಂಡದ ಕೋಚ್ ಆಗಿ..

2023ರಲ್ಲಿ ಅಮೋಲ್ ಮಜುಮ್ದಾರ್ ಭಾರತ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಜವಾಬ್ದಾರಿ ಸ್ವೀಕರಿಸಿದಾಗ ತಂಡದೊಳಗೆ ಅಷ್ಟೇನೂ ಉತ್ತಮ ವಾತಾವರಣವಿರಲಿಲ್ಲ.. ಸ್ವತಃ ಕೋಚ್ ಹುದ್ದೆಗೇ ಅಸ್ಥಿರತೆ ಕಾಡುತ್ತಿದ್ದ ಸಮಯ. ತಂಡದ ಆಯ್ಕೆ ಮತ್ತು ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅಂತಹ ಸಂದರ್ಭದಲ್ಲಿ ಅಮೋಲ್ ಮಜುಮ್ದಾರ್ ಅವರ ನೇಮಕ ಹಲವರ ಹುಬ್ಬೇರುವಂತೆ ಮಾಡಿತ್ತು. 

ಅತ್ತ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್’ನಂತಹ ತಂಡಗಳ ವಿರುದ್ಧ ನಿರಂತರವಾಗಿ ವೈಫಲ್ಯ ಎದುರಿಸುತ್ತಾ ಬಂದಿತ್ತು ಮಹಿಳಾ ತಂಡ. ಇಲ್ಲಿಂದ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ.. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಮೊದಲೇ ಇಲ್ಲ.. 

ಆಡುತ್ತಿದ್ದಷ್ಟೂ ಸಮಯ ಆಯ್ಕೆ ಸಮಿತಿಯ ಅವಕೃಪೆಗೆ ಗುರಿಯಾಗುತ್ತಲೇ ಬಂದಿದ್ದ ಅಮೋಲ್ ಮಜುಮ್ದಾರ್ ಸಾಮರ್ಥ್ಯದ ಬಗ್ಗೆ ಇಲ್ಲಿಯೂ ಅನುಮಾನ ಪಟ್ಟಿದ್ದರು ಹಲವರು. ಆದರೆ ಅಮೋಲ್ ಅಂಜಲೂ ಅಲ್ಲ, ಅಳುಕಲೂ ಇಲ್ಲ.. ದೊಡ್ಡ ಜವಾಬ್ದಾರಿಗೆ ಎದೆಯೊಡ್ಡಿ ನಿಂತು ಬಿಟ್ಟರು. 

ಕೋಚ್ ಆಗಿ ಬಂದ ಅಮೋಲ್ ಮಜುಮ್ದಾರ್ ಮಾಡಿದ ಮೊದಲ ಕೆಲಸ ತಂಡದೊಳಗೆ ನಂಬಿಕೆಯನ್ನು ಗಟ್ಟಿಗೊಳಿಸಿದ್ದು. ಸ್ಲೋಗನ್’ಗಳಿಲ್ಲ.. ಭಾವನೆಗಳಿಲ್ಲ.. ನಾಟಕೀಯತೆಯಿಲ್ಲ.. Only ಫೋಕಸ್.. ಇದು ಮಿತಭಾಷಿ ಮಜುಮ್ದಾರ್ ಕಾರ್ಯವೈಖರಿ.. ಅಲ್ಲಿ ಮಾತಿಗಿಂತ ಕೆಲಸ ಮಾತನಾಡತೊಡಗಿತು. 

ಮುಂಬೈನ ರಣಜಿ ದಿಗ್ಗಜ.. ದೇಶೀಯ ಕ್ರಿಕೆಟ್’ನ ದಂತಕಥೆ.. ಇದೀಗ ಅದೇ ಮುಂಬೈನಲ್ಲಿ ವಿಶ್ವಕಪ್ ಫೈನಲ್.. ಭಾರತ ಪರ ಆಡುವ ಯೋಗವಿರಲಿಲ್ಲ.. ಕೋಚ್ ಆಗಿ ವಿಶ್ವಕಪ್ ಗೆಲ್ಲುವ ಯೋಗ..? ಗೆದ್ದರೆ ಚರಿತ್ರೆ.. 

-ಸುದರ್ಶನ್

Exit mobile version