SportsKannada | ಸ್ಪೋರ್ಟ್ಸ್ ಕನ್ನಡ

ಏಳು ಬೀಳುಗಳನ್ನು ದಾಟಿ ಋತುವಿನ ಏಳನೇ ಪ್ರಶಸ್ತಿಗೆ ಮುತ್ತಿಟ್ಟ ಫ್ರೆಂಡ್ಸ್ ಬೆಂಗಳೂರು

ದಿ.ಶ್ರೀನಾಥ್ ಆಚಾರ್ಯ ಸ್ಮರಣಾರ್ಥ-ಅದ್ಧೂರಿಯ ಕ್ರಿಕೆಟ್ ಹಬ್ಬ ಸಿಝ್ಲರ್ ಟ್ರೋಫಿಗೆ ತೆರೆ
ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲದ ಆಶ್ರಯದಲ್ಲಿ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರ ಸಹಯೋಗದೊಂದಿಗೆ ಯುವಕಮಂಡಲದ ಮಾಜಿ ಅಧ್ಯಕ್ಷ ದಿ. ಶ್ರೀನಾಥ್ ಆಚಾರ್ಯ ಸ್ಮರಣಾರ್ಥ,
ಉದ್ಯಮಿ ಹಾಗೂ ಕ್ರೀಡಾ ಸಂಘಟಕ ಪ್ರಸನ್ನ ಕುಮಾರ್ ಶೆಟ್ಟಿ ಇವರ ದಕ್ಷ ಸಾರಥ್ಯದಲ್ಲಿ ಹೊನಲು ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಿಝ್ಲರ್ ಟ್ರೋಫಿ-2024 ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ  ಆಯೋಜಿಸಲಾಯಿತು. ಸಿಝ್ಲರ್ ಟ್ರೋಫಿ  ರಾಷ್ರೀಯ ಮಟ್ಟದ ಭವ್ಯವಾದ  ಕ್ರಿಕೆಟ್  ಟೂರ್ನಿಯಲ್ಲಿ ಪ್ರತಿಷ್ಠಿತ 8 ತಂಡಗಳು ಪಾಲ್ಗೊಂಡಿದ್ದವು.  ಚೆನ್ನೆ, ಕುಂದಾಪುರ, ಬೆಂಗಳೂರು, ಉಡುಪಿ ಹೀಗೆ ವಿವಿಧೆಡೆಯ ಎಂಟು ಬಲಿಷ್ಟ ತಂಡಗಳು ಆರನೇ ಬಾರಿಯ ಸಿಝ್ಲರ್ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದವು.
1976 ರಲ್ಲಿ ಆರಂಭಗೊಂಡ ಸಾಮೆತ್ತಡ್ಕ ಯುವಕ ಮಂಡಲ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದು, ಸುವರ್ಣ ಮಹೋತ್ಸವದ ಸನಿಹದಲ್ಲಿಸುಮಾರು 150 ಮಂದಿ ಸದಸ್ಯರನ್ನು ಹೊಂದಿದೆ. ಪ್ರತಿ ವರ್ಷ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬಂದಿದ್ದು, ಅದರಲ್ಲೂ ಹೊನಲು ಬೆಳಕಿನ ಪಂದ್ಯಾಟವನ್ನು 1999 ರಿಂದ ಆರಂಭಿಸಿ ಅದನ್ನು 3 ವರ್ಷಕ್ಕೊಮ್ಮೆ ಮಾಡಿಕೊಂಡು ಬರುತ್ತಿದ್ದು ಇದೀಗ 6ನೇ ಬಾರಿ ಉಚಿತ ಪ್ರವೇಶಾತಿಯೊಂದಿಗೆ ಗರಿಷ್ಠ ನಗದು ಪ್ರಶಸ್ತಿಯ ಅದ್ಧೂರಿಯ ಕ್ರಿಕೆಟ್ ಪಂದ್ಯಾಟ ನಡೆಯಿತು.
 ಜನವರಿ 20,21ರಂದು  ನಡೆದ ಈ  ಹೊನಲು ಬೆಳಕಿನ ರಾಷ್ರೀಯ ಮಟ್ಟದ  ಟೆನಿಸ್ ಬಾಲ್ ಕ್ರಿಕೆಟ್  ಪಂದ್ಯಾವಳಿ ಸಿಝ್ಲರ್ ಟ್ರೋಫಿ  2024 ರಲ್ಲಿ  ಜೈ ಕರ್ನಾಟಕ ಬೆಂಗಳೂರು, ರಿಯಲ್ ಫೈಟರ್ಸ್ ಉಡುಪಿ, ಡ್ರೀಮ್ ಇಲೆವೆನ್ ಚೆನ್ನೈ ಮೈಟಿ ಬೆಂಗಳೂರು,ಇಜಾನ್ ಸ್ಪೋರ್ಟ್ಸ್ ಉಡುಪಿ, ಫ್ರೆಂಡ್ಸ್ ಬೆಂಗಳೂರು, ಜಾನ್ಸನ್ ಕುಂದಾಪುರ ಮತ್ತು ಪ್ರಕೃತಿ ನ್ಯಾಶ್ ಬೆಂಗಳೂರು ತಂಡಗಳು ಭಾಗವಹಿಸಿದ್ದವು.
ಭಾನುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನ್ಯಾಶ್ ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಗೆ ಎಂಟ್ರಿ ಪಡೆದಿತ್ತು‌.ಜಾನ್ಸನ್ ಕುಂದಾಪುರ
ಮತ್ತು ಇಝಾನ್ ಸ್ಪೋರ್ಟ್ಸ್ ಉಡುಪಿ ಇತ್ತಂಡಗಳ ಮಧ್ಯೆ ನಡೆದ ಎಲಿಮಿನೇಟರ್ ಕಾದಾಟದಲ್ಲಿ ಜಾನ್ಸನ್ ಕುಂದಾಪುರ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು.ತದನಂತರ ಎರಡನೇ ಕ್ವಾಲಿಫೈಯರ್ ನಲ್ಲಿ ಫ್ರೆಂಡ್ಸ್ ಬೆಂಗಳೂರು-ಇಝಾನ್ ಸ್ಪೋರ್ಟ್ಸ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆದಿತ್ತು.ಫೈನಲ್ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿ ಸಾಗಿದ್ದು,ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.
ಫೈನಲ್ ಪಂದ್ಯ ಟೈನಲ್ಲಿ‌ ಅಂತ್ಯಗೊಂಡು ಅದಾದ ಬಳಿಕ ಸೂಪರ್ ಓವರ್ ನಿಯಮ ಅಳವಡಿಸಿದರೆ,ಅಂತಿಮವಾಗಿ ಸಾಗರ್ ಭಂಡಾರಿ ಬ್ಯಾಟಿಂಗ್ ಪರಾಕ್ರಮದಿಂದ ಫ್ರೆಂಡ್ಸ್ ಬೆಂಗಳೂರು ತಂಡ ಪ್ರಕೃತಿ ನ್ಯಾಶ್ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟಿದೆ…
ಫ್ರೆಂಡ್ಸ್ ಬೆಂಗಳೂರು ತಂಡದ ಗೆಲುವಿನ ನಾಗಾಲೋಟ ಮತ್ತೆ ಮುಂದುವರಿದಿದೆ . ಇತಿಹಾಸದ ಮೇಲೆ ಇತಿಹಾಸ ಬರೆಯುತ್ತಿರುವ ರೇಣು ಗೌಡ ಸಾರಥ್ಯದ ರಾಜ್ಯದ ಬಲಿಷ್ಠ ತಂಡ ಫ್ರೆಂಡ್ಸ್ ಬೆಂಗಳೂರು ಪ್ರತಿಷ್ಠಿತ ಸಿಝ್ಲರ್ ಟ್ರೋಫಿ ಹಗಲು-ರಾತ್ರಿಯ ಪಂದ್ಯಾವಳಿ ಪ್ರಶಸ್ತಿಯನ್ನು ಗೆದ್ದು ಮತ್ತೊಮ್ಮೆ ಬೀಗಿದೆ. ಬೆಂಗಳೂರಿನ ಪ್ರಕೃತಿ ನ್ಯಾಶ್ ತಂಡವನ್ನು ಸೋಲಿಸಿ ಫ್ರೆಂಡ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ತಮ್ಮ ತಂಡ ಯಾವತ್ತಿಗೂ ಬಲಿಷ್ಠ, ಸೋಲಿಲ್ಲದ ಸರದಾರರು ಎಂಬುದನ್ನುಸಾಬೀತುಪಡಿಸಿದೆ. ಚಾಂಪಿಯನ್ ಗಳಾಗಿ ಹೊರಹೊಮ್ಮಿದ ವಿನ್ನರ್ಸ್ ಫ್ರೆಂಡ್ಸ್ ಬೆಂಗಳೂರು  2 ಲಕ್ಷ ನಗದು ಹಾಗು ಸಿಝ್ಲರ್ ಟ್ರೋಫಿ ಪಡಕೊಂಡರೆ,  ದ್ವಿತೀಯ ಸ್ಥಾನ ಪಡೆದ ಪ್ರಕೃತಿ ನ್ಯಾಶ್ ಬೆಂಗಳೂರು  ತಂಡ  1 ಲಕ್ಷ ನಗದು ಮತ್ತು ಟ್ರೋಫಿಯನ್ನು ಪಡೆಯಿತು.
ಫೈನಲ್ ಮ್ಯಾನ್ ಆಫ್ ದ ಮ್ಯಾಚ್ – ಸಾಗರ್ ಭಂಡಾರಿ,ಟೂರ್ನಿಯ ಬೆಸ್ಟ್ ಬ್ಯಾಟ್ಸಮನ್ ನವೀನ್ ಫ್ರೆಂಡ್ಸ್ ಬೆಂಗಳೂರು,ಬೆಸ್ಟ್ ಫೀಲ್ಡರ್ ಪ್ರಶಸ್ತಿ ನಸ್ರು,ಬೆಸ್ಟ್ ಬೌಲರ್  ಸ್ವಸ್ತಿಕ್ ನಾಗರಾಜ್, ಬೆಸ್ಟ್ ವಿಕೆಟ್ ಕೀಪರ್ ಮಹೇಶ್ ನ್ಯಾಶ್ ಹಾಗೂ ಮ್ಯಾನ್ ಆಫ್ ದ ಸೀರೀಸ್  ಸಾಗರ್ ಭಂಡಾರಿಗೆ  ಒಂದು ಲಕ್ಷ ರೂ ಮೌಲ್ಯದ ಬೈಕ್ ನೀಡಲಾಯಿತು.
ಸಿಝ್ಲರ್ ಟ್ರೋಫಿ-2024 ಹಣಾಹಣಿಗಾಗಿ ಉತ್ಸಾಹಭರಿತ ಸ್ಪರ್ಧೆಯಲ್ಲಿ  ವಿವಿಧ ತಂಡದ ಆಟಗಾರರು ಉತ್ತಮ ಪ್ರದರ್ಶನವನ್ನು ತೋರ್ಪಡಿಸಿ ಸರ್ವಾಂಗೀಣ ಆಟದ ಮೂಲಕ ಪುತ್ತೂರಿನ ಕ್ರೀಡಾ ಪ್ರೇಮಿಗಳನ್ನು ರಂಜಿಸಿದರು.ಸಮಾರಂಭದ ವೇದಿಕೆಯಲ್ಲಿ ರಾಜಕೀಯ ಧುರೀಣರು,ಚಲನ ಚಿತ್ರ ತಾರೆಯರು,ವಿವಿಧ ಕ್ಷೇತ್ರಗಳ ಸಾಧಕರ ಸಹಿತ ಅನೇಕ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.ಬಿಲ್ಲಿ ಬೌಡೆನ್ ಖ್ಯಾತಿಯ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ,ಕನ್ನಡ ಸೇವಾರತ್ನ ಪ್ರಶಸ್ತಿ ಪುರಸ್ಕೃತ ವೀಕ್ಷಕ ವಿವರಣೆಗಾರ ಪ್ರಶಾಂತ್ ಅಂಬಲಪಾಡಿ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದರೆ,ಸುಮಾರು 25,000 ಕ್ಕೂ ಹೆಚ್ಚಿನ ಮಂದಿ ಮೈದಾನದಲ್ಲಿ ಹಾಗೂ
M9sports ಯೂಟ್ಯೂಬ್ ಚಾನೆಲ್ ನೇರ ಪ್ರಸಾರದ ಮೂಲಕ ಲಕ್ಷಾಂತರ ಮಂದಿ ಪಂದ್ಯಾಟ ವೀಕ್ಷಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
Exit mobile version