SportsKannada | ಸ್ಪೋರ್ಟ್ಸ್ ಕನ್ನಡ

ಕಿರಿ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಗೆ ಬಲಿಯಾದ ಉದಯೋನ್ಮುಖ ಕ್ರಿಕೆಟಿಗ ರಕ್ಷಿತ್ ಶೆಟ್ಟಿ…!

ಸಾವು ಅನ್ನೋದು ಅನಿರೀಕ್ಷಿತ. ಯಾರು? ಯಾವಾಗ? ಎಲ್ಲಿ? ಹೇಗೆ? ಸಾವಿನಮನೆ ಸೇರುತ್ತಾರೆಂದು ಊಹಿಸಲು ಸಾಧ್ಯವಿಲ್ಲ..! ಯಾವ ರೂಪದಲ್ಲಾದರು ಸಾವು ಎದುರಾಗಬಹುದು. ಈ ರೀತಿಯ ಸಾವಿಗೆ ಉಸಿರು ಚೆಲ್ಲಿದವರು ಉಡುಪಿ ಜಿಲ್ಲೆಯ ಪೆರ್ಡೂರು ಸಮೀಪದ ಬುಕ್ಕಿಗುಡ್ಡೆಯ ಯುವ ಕ್ರಿಕೆಟಿಗ ರಕ್ಷಿತ್ ಶೆಟ್ಟಿ..!!
ಸಾವು ಬಹುಬೇಗನೆ ಬಂದು ಆತನ ಉಸಿರನ್ನು ಕಸಿದುಕೊಂಡು ಹೋಗಿದೆ ವಿಧಿ..?
 30 ವರ್ಷದ ಗಡಿ ದಾಟುವ ಮುನ್ನವೆ ಬ್ರೈನ್ ಟ್ಯೂಮರ್ ಗೆ ಬಲಿಯಾದ ಯುವಕನನ್ನು ಕಂಡು ಆತನ ಆಪ್ತ ವಲಯ ಬೆಚ್ಚಿ ಬಿದ್ದಿದೆ.ಈತನ ಸಾವಿನ ಸುದ್ದಿ ತಿಳಿದು  ಆತನ ಹೆತ್ತವರಿಗೂ ಸಂಬಂಧಿಕರಿಗೂ ಮತ್ತು ಮಿತ್ರವೃಂದಕ್ಕೂ ಇನ್ನೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿಧಿ ನಿನೇಷ್ಟು ಕ್ರೂರಿ ಬದುಕಿನ ಹಾದಿಯಲ್ಲಿ ನೆಮ್ಮದಿಯ ಪಯಣ ಮಾಡುತ್ತಿದ್ದ  ಹುಡುಗನ ಉಸಿರು ನಿಲ್ಲಿಸಿ ನಿನ್ನ ಕ್ರೂರ ತನವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಿಯಾ..! ಬೆಟ್ಟದಷ್ಟು ಕನಸುಗಳನ್ನು ತನ್ನ ಜೋಳಿಗೆಯಲ್ಲಿ ಹೊತ್ತು ತನ್ನಿಚ್ಚೆಯ ಗುರಿತಲುಪಲು ಹಗಲಿರುಳು ಶ್ರಮಿಸುತ್ತಿದ್ದ  ಯುವಕ  ರಕ್ಷಿತ್ ಶೆಟ್ಟಿ.
ರಕ್ಷಿತ್ ಶೆಟ್ಟಿಗೆ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ಆಟವೆಂದರೆ ಪಂಚಪ್ರಾಣ. ತಾನು ಕೂಡ ಒಳ್ಳೆಯ ಕ್ರಿಕೆಟಿಗನಾಗಬೇಕೆಂದು ಕನಸು ಕಂಡವನು ಸುಮ್ಮನೆ ಕೂರಲಿಲ್ಲಿ. ಕರಾವಳಿ ಮೂಲದ ಪ್ರಸಿದ್ದ ತಂಡಗಳಲ್ಲಿ ಒಂದಾದ ಪೆರ್ಡೂರಿನ *”ಗೆಳೆಯರ ಬಳಗ”* ತಂಡದ ಮುಖಾಂತರ ಕ್ರಿಕೆಟ್ ಆಟವನ್ನು ಆರಂಭಿಸಿದ *”ರಕ್ಷಿತ್ ಶೆಟ್ಟಿ”* ತಿರುಗಿ ನೋಡಲಿಲ್ಲ ಉತ್ತಮ ಆಟಗಾರನಾಗಿ ಹೊರಹೊಮ್ಮಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.  ತಾಲ್ಲೂಕು ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಗಳಲ್ಲಿ ತನ್ನ ಆಕರ್ಷಕ ಬೌಲಿಂಗ್ ನಿಂದ ಸಾಕಷ್ಟು ಹೆಸರು ಮಾಡಿದ್ದ ರಕ್ಷಿತ್ ಶೆಟ್ಟಿ ರಾಜ್ಯದ ಹೆಸರಾಂತ ತಂಡಗಳನ್ನು ಪ್ರತಿನಿಧಿಸುವ ಮೂಲಕ ಕರಾವಳಿಯ ಹೆಸರಾಂತ ಬೌಲರ್ ಸಾಲಿನಲ್ಲಿ ತನ್ನ ಹೆಸರನ್ನು ನಮೂದಿಸಿದ್ದರು.
ಸೌಮ್ಯ ಸ್ವಭಾವದ ಆಕರ್ಷಕ ಮೈಕಟ್ಟಿನ ಸುಂದರ ಯುವಕ ರಕ್ಷಿತ್ ಶೆಟ್ಟಿ ತನ್ನ 29 ನೇ ವಯಸ್ಸಿನಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.
 ಮನೆಯ ಮುದ್ದಿನ ಮಗನಾಗಿದ್ದ ರಕ್ಷಿತ್ ಶೆಟ್ಟಿಗೆ ಮನೆಯ ಜವಾಬ್ದಾರಿಯು ಕೂಡ ಹೆಗಲ ಮೇಲಿತ್ತು ಎಲ್ಲವನ್ನೂ ನಿಭಾಯಿಸುವ ಶಕ್ತಿಕೂಡ ಅವನಲ್ಲಿತ್ತು. ಎಲ್ಲವನ್ನೂ ಸರಿದೂಗಿಸಿಕೊಂಡು ಹೆಜ್ಜೆ ಹಾಕುತ್ತಿದ್ದ ಸಮಯದಲ್ಲಿಯೇ  ರಕ್ಷಿತ್ ಶೆಟ್ಟಿಯ ಮೇಲೆ ಆ ದೇವರಿಗೂ ಜಲಸ್ಸಿರ ಬೇಕು..! ಕಳೆದ ಜನವರಿ ಎಂಟನೇ ತಾರೀಖು ಯಾರು ಊಹಿಸಲು ಸಾಧ್ಯವಿಲ್ಲದಂತಹ ಸುದ್ದಿಯೊಂದು ಸುನಾಮಿಯಂತೆ ಕರಾವಳಿಯ ಮಂದಿಯ ಕಿವಿಗೆ  ಅಪ್ಪಳಿಸಿತ್ತು..! ಇನ್ನೂ ಬಾಳಿ ಬದುಕಬೇಕಾಗಿದ್ದ 29 ವಯಸ್ಸಿನ ಯುವಕ ರಕ್ಷಿತ್ ಶೆಟ್ಟಿ ಇನ್ನಿಲ್ಲ ಎನ್ನುವ ಸಾವಿನ ಸುದ್ದಿ..!
ತನ್ನ ಬದುಕಿಗೆ ಅಂತ್ಯವಾಡಿ ಒಲ್ಲದ ಮನಸ್ಸಿನಿಂದಲೆ ಈ ನೆಲದ ಋಣ ಮುಗಿಸಿ ಹೊರಟ ಶ್ರೇಷ್ಠ ಕ್ರಿಕೆಟಿಗನ ಸಾವಿನ ಸುದ್ಧಿ ಕರಾವಳಿಯ ಕ್ರಿಕೆಟ್ ಅಂಗಳದ ಅಸಂಖ್ಯಾತ ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು  ಒಮ್ಮೆ ದುಃಖಿಸುವಂತೆ ಮಾಡಿತ್ತು. ರಕ್ಷಿತ್ ಶೆಟ್ಟಿಯ ಸಾವಿನ ಸುದ್ಧಿ ಕೇಳಿದ ಕುಟುಂಬಸ್ಥರು ಮತ್ತು ಮಿತ್ರರು ಕ್ರಿಕೆಟ್ ಅಂಗಳದ ಸ್ನೇಹಿತರ ದುಃಖ ಮುಗಿಲು ಮುಟ್ಟಿತ್ತು. ಚಿಕ್ಕ ವಯಸ್ಸಿನಲ್ಲೇ ಬ್ರೈನ್ ಟ್ಯೂಮರ್ ಎಂಬ ಮಾರಕ ರೋಗಕ್ಕೆ ಬಲಿಯಾದ ರಕ್ಷಿತ್ ಶೆಟ್ಟಿಯ ಅಂತಿಮ ದರ್ಶನಕ್ಕೆ ಆತನ ಸ್ನೇಹಿತರು ಕ್ರಿಕೆಟ್ ಅಭಿಮಾನಿಗಳು.ಸಹ ಆಟಗಾರರು ಮತ್ತು ಕುಟುಂಬಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಅಂತಿಮ ಯಾತ್ರೆಯೊಂದಿಗೆ ಯುವ ಕ್ರಿಕೆಟಿಗನನ್ನು ಬಿಳ್ಕೋಟ್ಟರು….
ಒಟ್ಟಿನಲ್ಲಿ ಮಾರಕ ರೋಗವೊಂದು ಹರೆಯದ ಯುವಕನನ್ನು ಬಲಿಪಡೆದಿದ್ದು ಮಾತ್ರ ದುರಂತವೆ ಹೌದು..!
 ಮೃತ ರಕ್ಷಿತ್ ಶೆಟ್ಟಿಯ ಆತ್ಮಕ್ಕೆ ಚಿರಶಾಂತಿ ದೊರಕಲಿ ದೇವರು ಅವರ ಅಭಿಮಾನಿಗಳು. ಮಿತ್ರರು ಮತ್ತು ಕುಟುಂಬ ವರ್ಗದರಿಗೆ  ದುಃಖ ಭರಿಸುವ ಶಕ್ತಿ ನೀಡಲಿ
Exit mobile version