ಬೈಂದೂರು ಸುದ್ಧಿ ಜ.24 : ಇಲ್ಲಿನ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ಬಂಕೇಶ್ವರ ಇವರ ಆಶ್ರಯದಲ್ಲಿ ತೃತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2021, ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬೈಂದೂರು ತಾಲೂಕು ಯುವ ಸಬಲೀಕರಣ ಕ್ರೀಡಾಧಿಕಾರಿ ಪ್ರಭಾಕರ್ ಎಸ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದಯೋ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿರುತ್ತಾರೆ. ಯಾವ ಆಟದಲ್ಲಿ ನಮಗೆ ಆಸಕ್ತಿ ಇದೆಯೋ ಆ ಆಟದ ಬಗ್ಗೆ ಶ್ರದ್ಧೆ ಹೊಂದಿರಬೇಕು. ಆಟದಲ್ಲಿ ಯಶಸ್ಸು ಕಾಣಲು ಕಠಿಣವಾದ ಪರಿಶ್ರಮ ಅಗತ್ಯ ಎಂದರು.


ಬಂಕೇಶ್ವರ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ಇದರ ಅಧ್ಯಕ್ಷ ಸತೀಶ್ ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುಖ್ಯಅತಿಥಿಗಳಾಗಿ ಕ್ಲಬ್ ನ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಎಚ್ ಬಂಕೇಶ್ವರ, ಕ್ರೀಡಾಂಗಣದ ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ಜಿ ನಾಯಕ್, ಬಂಕೇಶ್ವರ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ವ್ಯವಸ್ಥಾಪಕಿ ಚಿತ್ರಾ, ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ನ ಉಪಾಧ್ಯಕ್ಷ ಮಂಜುನಾಥ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಸದಸ್ಯರಾದ ಆದೀಶ್ ಸ್ವಾಗತಿಸಿದರು, ಪಂಜು ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು, ಯೋಗೀಶ್ ವಂದಿಸಿದರು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಹಾಗೂ ಬಳಿಕ ಬೈಂದೂರು ಖ್ಯಾತ ಗಾಯಕಿ ಗೀತಾ ಬೈಂದೂರು ಇವರಿಂದ ಮ್ಯೂಸಿಕ್ ನೈಟ್ ಹಾಗೂ ಸ್ಥಳೀಯ ಮಕ್ಕಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ವರದಿ : ಎಚ್. ಸುಶಾಂತ್ ಬೈಂದೂರು