5 C
London
Wednesday, April 24, 2024
Homeಅಥ್ಲೆಟಿಕ್ಸ್ತನುಶ್ರೀ ಪಿತ್ರೋಡಿ-ವಿಶ್ವದಾಖಲೆಯ ಸರದಾರಿಣಿಯ ಸಾಧನೆಯ ಸರಪಣಿಯಲ್ಲಿ ಮಿನುಗುತಿದೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ತನುಶ್ರೀ ಪಿತ್ರೋಡಿ-ವಿಶ್ವದಾಖಲೆಯ ಸರದಾರಿಣಿಯ ಸಾಧನೆಯ ಸರಪಣಿಯಲ್ಲಿ ಮಿನುಗುತಿದೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ತುಂಬು ಸಾಂಸ್ಕೃತಿಕ ಕಲಾ ತವರೆಂಬ ಹಿರಿಮೆಯಲ್ಲಿ ಕಂಗೊಳಿಸುವ ಕರಾವಳಿಯು ತನ್ನೊಡಲಿನಲ್ಲಿ  ಅಗಾಧವಾದ ವಿಶೇಷ ಪ್ರತಿಭೆಗಳ ಅನರ್ಘ್ಯ ರತ್ನಗಳನ್ನೇ ಬಚ್ಚಿಟ್ಟುಕೊಂಡಿದೆ. ಇಂತಹ ಅಪರೂಪದ ಮಣಿಮಾಲೆಗಳಲ್ಲಿ ತನುಶ್ರೀ ಪಿತ್ರೋಡಿ ಎಂಬ ಕಿರಿಯ ವಯಸ್ಸಿನ ಹಿರಿಮೆಯ ಸಾಧಕಿ ತನ್ನಲ್ಲಿನ ವಿಶೇಷ ಹೊಳಪಿನಿಂದ ಜಗವನ್ನೇ ತನ್ನತ್ತ ಸೆಳೆಯುತ್ತಿದ್ದಾಳೆ.
ಉಡುಪಿ ಜಿಲ್ಲೆಯ ಉದ್ಯಾವರ ಬಳಿಯ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿಯಾಗಿ 2009 ರಲ್ಲಿ ಜನಿಸಿದ  ತನುಶ್ರೀ  ಇಂದು ವಿಶ್ವಮಟ್ಟದ ದಾಖಲೆಗಳ ಸರದಾರಿಣಿ. ಹೆಚ್ಚಿನ ಮಕ್ಕಳು ನಡೆಯಲು ಹಾಗೂ ಮಾತನಾಡಲು ಕಲಿಯುವಂತಹ ಮೂರುವರೆ ವರ್ಷದ ವಯಸ್ಸಿನಲ್ಲಿ ತನುಶ್ರೀಯು ನೃತ್ಯ ಮಾಡುವಷ್ಟರ ಮಟ್ಟಿಗೆ ಚುರುಕಾಗಿದ್ದಳು. ಇವಳಿಗೆ  ನೃತ್ಯದಲ್ಲಿದ್ದ ಬಹಳಷ್ಟು ಆಸಕ್ತಿ ಹಾಗೂ ಪ್ರತಿಭೆಯನ್ನು ಗಮನಿಸಿದ್ದ ಹೆತ್ತವರು ಉಡುಪಿಯ ನೃತ್ಯ  ಶಾಲೆಗೆ ಸೇರಿಸಿ  ಅಗತ್ಯವಾದ ಮಾರ್ಗದರ್ಶನವನ್ನು ಕೊಡಿಸಿದರು. ತನಗೆ ಸಿಕ್ಕ ತರಬೇತಿಯಿಂದಲೇ ತನುಶ್ರೀ ಭರತನಾಟ್ಯ, ಯಕ್ಷಗಾನ, ಹಿಪ್-ಹಾಪ್, ಅರೆ ಶಾಸ್ತ್ರೀಯ ನೃತ್ಯದಲ್ಲಿ ಬಹಳಷ್ಟು ಪರಿಣಿತಿಯನ್ನು ಪಡೆದವಳು ತನ್ನಲ್ಲಿದ್ದ ಸುಂದರ ಪ್ರತಿಭೆಯನ್ನು ಹಲವು ವೇದಿಕೆಗಳಲ್ಲಿ ಅನಾವರಣಗೊಳಿಸಿದಳು. ತನ್ನ ಚಿಕ್ಕ ವಯಸ್ಸಿನಲ್ಲೇ  ಮುನ್ನೂರಕ್ಕೂ ಅಧಿಕ ವೇದಿಕೆಗಳು ಅವಳಲ್ಲಿನ ಪ್ರತಿಭೆಗೆ ಸಾಕ್ಷಿಯಾದವು.
ನೃತ್ಯದಲ್ಲಿ ವಿಶೇಷ ತರಬೇತಿ ಹಾಗೂ ಪರಿಣಿತಿ ಪಡೆದಿದ್ದ ತನುಶ್ರೀಯು ಯೋಗದಲ್ಲಿ ವಿಶ್ವವಿಖ್ಯಾತ ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಕಾರಣವಾದ ಸನ್ನಿವೇಶವೇ ಬಲು ಸೋಜಿಗ. ಚಿಕ್ಕಂದಿನಿಂದಲೇ ಯಾವುದೇ ತರಗತಿಗಳಿಗೆ ಹೋಗದೇ ಆನ್ ಲೈನ್ ವಿಡಿಯೋಗಳ ಮೂಲಕ ಯೋಗದ ಹವ್ಯಾಸವನ್ನು ರೂಢಿಸಿಕೊಂಡಿದ್ದ ತನುಶ್ರೀ ಒಂದು ದಿನ ಖುಷಿ ಎಂಬ ಮೈಸೂರಿನ ಬಾಲಕಿ ನೀರಾಲಂಬ ಪೂರ್ಣ ಚಕ್ರಾಸನ ಎಂಬ ಆಸನವನ್ನು ಒಂದು ನಿಮಿಷಕ್ಕೆ 15 ಬಾರಿ ಮಾಡಿ ದಾಖಲೆ ಬರೆದ ವೀಡಿಯೋವನ್ನು ನೋಡಿ ಆ ಕ್ಷಣಕ್ಕೆ ತಾನು ನಿಮಿಷಕ್ಕೆ ಅದೇ ಆಸನವನ್ನು 9 ಬಾರಿ ಮಾಡಿದಾಗ ಪ್ರತ್ಯಕ್ಷದರ್ಶಿಯಾದ  ತಂದೆ ಉದಯಕುಮಾರ್ ಅವರಿಗೆ ತನ್ನ ಮಗಳ ದೇಹಶಕ್ತಿಯ ಕುರಿತು ಕುತೂಹಲವೇ ಹೆಚ್ಚಾಗಿ ಖುಷಿಯ ದಾಖಲೆಯನ್ನು ಮುರಿಯುವೆಯಾ ಎಂಬ ಆ ಕ್ಷಣದ ಸಂತಸಕ್ಕೆ ಹೊರಬಂದ ಮಾತು ಮುಂದೆ ತನುಶ್ರೀಯ ಸಾಧನೆಯ ಹಾದಿಗೆ ಮುನ್ನುಡಿಯನ್ನು ಬರೆದುಬಿಟ್ಟಿತು.
ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಯೋಗ್ಯ ಮಾರ್ಗದರ್ಶನದ ಫಲವಾಗಿ ಒಂದು ನಿಮಿಷದಲ್ಲಿ ನಿರಾಲಂಬ ಚಕ್ರಾಸನವನ್ನು  19 ಬಾರಿ ಮಾಡಿದ ನೂತನ ದಾಖಲೆಯ ಮೂಲಕ 2017ರಲ್ಲಿ Golden book of world record  ಗೆ ತನ್ನ ಹೆಸರನ್ನು ನೊಂದಾಯಿಸಿಕೊಂಡು ಬಯಕೆಯ ಸಿರಿಯಲ್ಲಿ ಚಿಗುರೊಡೆದ ಕನಸೊಂದು ಹೆಮ್ಮರವಾಗಿ ಬೆಳೆದು ಮೊದಲ ಮೈಲಿಗಲ್ಲು ಸ್ಥಾಪನೆಯಾಯಿತು.
  2018 ರಲ್ಲಿ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ರಿ. ಪಿತ್ರೋಡಿ ಇವರ ನೇತೃತ್ವದಲ್ಲಿ most full body revolution maintaining a chest stand posture ಯೋಗಾಸನದ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮುಖೇನ ದ್ವಿತೀಯ ವಿಶ್ವದಾಖಲೆಯನ್ನು ಮಾಡುತ್ತಾಳೆ.
2019 ರಲ್ಲಿ ಧನುರಾಸನದ ಭಂಗಿಯನ್ನು 1 ನಿಮಿಷದಲ್ಲಿ 62 ಬಾರಿ  ಸುರುಳಿಯನ್ನು ಮಾಡಿ ಹಾಗೂ ಕೇವಲ 1.40 ನಿಮಿಷದಲ್ಲಿ 100 ಬಾರಿ ಸುರುಳಿಗಳನ್ನು ಮಾಡಿ ಏಕಕಾಲದಲ್ಲಿ ಎರಡು ವಿಶ್ವದಾಖಲೆಯನ್ನು ಮಾಡುತ್ತಾಳೆ.
2020 ರಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಚಕ್ರಾಸನ ರೇಸ್ ನಲ್ಲಿ 100 ಮೀಟರ್ ನ್ನು ಕೇವಲ 1 ನಿಮಿಷ  14 ಸೆಕೆಂಡ್ ಗಳಲ್ಲಿ ಕ್ರಮಿಸಿ ನೂತನ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾಳೆ.
ಯೋಗಾಸನದ ಸಾಧನೆಯ ಮೂಲಕ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಿದ ಇವಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಕಂಡು ಮೆಚ್ಚಿದ  ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಯೋಗರತ್ನ ಎಂಬ ಬಿರುದನ್ನು ನೀಡಿ ಆಕೆಯನ್ನು ಹರಸಿ ಹಾರೈಸಿ ಆಕೆಯ ಸಾಧನೆಯ ಪಯಣಕ್ಕೆ ಶುಭಹಾರೈಸಿದ ಸವಿಗಳಿಗೆಯಂತೂ ಹೃದಯಕ್ಕೆ ಆಪ್ತವೆನಿಸುತ್ತದೆ.
ಪ್ರಸ್ತುತ ಈ ಬಾರಿಯ ಉಡುಪಿ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಯ ಗರಿಯೊಂದು ಇವಳ ಪ್ರಶಸ್ತಿಯ ಭತ್ತಳಿಕೆಯನ್ನು ಸೇರಿಕೊಂಡ ಗಳಿಗೆ ಉಡುಪಿ ಜಿಲ್ಲೆಯ ಪಾಲಿಗೆ ಬಲು ಹೆಮ್ಮೆಯ ಸಂಗತಿ.
 ನೂರಾರು ಸಂಘ ಸಂಸ್ಥೆಗಳು ಪ್ರೀತಿ ತುಂಬಿದ ಹೃದಯದಿಂದ  ಇವಳ ಸಾಧನೆಯನ್ನು ಗುರುತಿಸಿ ಗೌರವಿಸಿ ನೀಡಿದ ಪ್ರಶಸ್ತಿಯ  ಪಾರಿತೋಷಕಗಳು ಹಲವು ಮನಗಳ ಸಾಧನೀಯ ಪಯಣಕೆ ಸ್ಪೂರ್ತಿ ತುಂಬುತ್ತವೆ.
ತನುಶ್ರೀ ಎನ್ನುವ ಪಿತ್ರೋಡಿಯ ಬಾಲಕಿ ತನ್ನ 10 ನೇ ವಯಸ್ಸಿನಲ್ಲಿ  ಯೋಗಾಸನದಲ್ಲಿ ತನ್ನದೇ ಆದ ವೈಶಿಷ್ಟ್ಯತೆಯ ಸಾಧನೆಯ ಮೂಲಕ ಮತ್ತೆ 5 ಬಾರಿ ವಿಶ್ವ ದಾಖಲೆಯ ನಿರ್ಮಿಸಿ golden book of world record ನ ದಾಖಲೆಯ ಪುಟದಲ್ಲಿ ತನ್ನ ಹೆಸರನ್ನು ನೊಂದಾಯಿಸಿಕೊಳ್ಳುತ್ತಾಳೆ ಎಂದರೇ ಇದು ಅಸಾಮಾನ್ಯ ಸಾಧನೆ. ವಿಶ್ವದ ಅಪರೂಪದ ಸಾಧಕರ ಸಾಲಿನಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗದೆತ್ತರದಲ್ಲಿ ಹಾರಿಸಿದ ಹೆಮ್ಮೆಯ ಕುವರಿಯನ್ನು ಅದೆಷ್ಟೇ ಅಭಿನಂದನೀಯ ಪದಗಳಲ್ಲಿ ಬಣ್ಣಿಸಿದರೂ ಅವಳ ಸಾಧನೆಗೆ ಸರಿಸಾಟಿಯಾಗಿ ನಿಲ್ಲದು ಎಂದರೆ ಅತಿಶಯೋಕ್ತಿಯಲ್ಲ. ಸಾಧನೆಯ ಪಯಣದಲ್ಲಿ ಮತ್ತಷ್ಟು ಕನಸುಗಳು ಇವಳ ಮನದಲ್ಲಿ ಚಿಗುರೊಡೆಯಲಿ, ಚಿಗುರಿದ ಕನಸುಗಳು ಯಶಸ್ಸಿನ ಗುರಿಯನ್ನು ತಲುಪಿ ಮತ್ತಷ್ಟು ಸಾಧನೆಯ ಹೊನ್ನ ಗರಿಗಳು ಇವಳ ಭತ್ತಳಿಕೆಯನ್ನು ಸೇರಲಿ ಎಂಬ ಶುಭ ಹಾರೈಕೆ ನಮ್ಮದು…

Latest stories

LEAVE A REPLY

Please enter your comment!
Please enter your name here

twenty + eight =