
ಮಹಾಭಾರತದ ದ್ರೋಣಾಚಾರ್ಯ ಅಪ್ರತಿಮ ಬಿಲ್ಗಾರನಷ್ಟೇ ಅಲ್ಲ, ಅತ್ಯುತ್ತಮ ಗುರು ಕೂಡ ಹೌದು. ಹಸ್ತಿನಾವತಿಯ ಕ್ಷತ್ರಿಯ ಕುಮಾರರಿಗೆ ಧನುರ್ವಿದ್ಯೆಯನ್ನು ಧಾರೆ ಎರೆದು, ಅರ್ಜುನನಂಥಾ ಘನವಿಕ್ರಮಿಯನ್ನು ತಯಾರು ಮಾಡಿದ ಮಹಾಗುರು ದ್ರೋಣ.
ವೈಟ್’ಬಾಲ್ ಕ್ರಿಕೆಟ್’ನಲ್ಲಿ ಭಾರತದ ಸರ್ವಶ್ರೇಷ್ಠ ಮ್ಯಾಚ್ ವಿನ್ನರ್ ಯುವರಾಜ್ ಸಿಂಗ್ ತನ್ನಂತೆಯೇ ಒಬ್ಬ ಶಿಷ್ಯನನ್ನು ತಯಾರು ಮಾಡಿ ಭಾರತ ತಂಡಕ್ಕೆ ಕಳುಹಿಸಿದ್ದಾನೆ. ದ್ರೋಣಾಚಾರ್ಯ ಯುವರಾಜನ ಅರ್ಜುನನಂಥಾ ಆ ಪ್ರಿಯಶಿಷ್ಯನ ಹೆಸರು ಅಭಿಷೇಕ್ ಶರ್ಮಾ..!

ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ 47 ಚೆಂಡುಗಳಲ್ಲಿ ಸುನಾಮಿ ಶತಕ ಬಾರಿಸಿರುವ ಅಭಿಷೇಕ್ ಶರ್ಮಾ, ಭಾರತದ ವಿಶ್ವಕಪ್ ಹೀರೊ, living legend ಯುವರಾಜ್ ಸಿಂಗ್ ತಯಾರು ಮಾಡಿದ ಹುಡುಗ. 82 ರನ್ ಗಳಿಸಿ ಆಡುತ್ತಿದ್ದಾಗ ಸತತ ಮೂರು ಸಿಕ್ಸರ್ ಬಾರಿಸಿ ಶತಕ ಪೂರ್ತಿಗೊಳಿಸುತ್ತಾನೆ ಎಂದರೆ, no wonder.. ಈತ ಸಿಕ್ಸರ್ ಕಿಂಗ್ ಯುವರಾಜನ ಶಿಷ್ಯನೇ.
ವಯಸ್ಸು 23.. ಗುರುವಿನಂತೆ ಶಿಷ್ಯನೂ ಎಡಗೈ ದಾಂಡಿಗ, ಎಡಗೈ ಸ್ಪಿನ್ನರ್. ಕಳೆದ ಐಪಿಎಲ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಆಡಿದ ಆಟವನ್ನು ನೋಡಿದವರು, ‘’ಅನುಮಾನವೇ ಬೇಡ, he is the future star’’ ಎಂದು ಉದ್ಘರಿಸಿದ್ದರು. ಕಾರಣ, ಆತ ಆಡಿದ್ದ ಆಟ ಹಾಗಿತ್ತು. 237 ಎಸೆತಗಳಲ್ಲಿ 484 ರನ್, 42 ಸಿಕ್ಸರ್, ಸರಿಸುಮಾರು 204 ಬ್ಯಾಟಿಂಗ್ strike rate.

ಐಪಿಎಲ್’ನಲ್ಲಿ ಅಬ್ಬರಿಸಿದ ಮಾತ್ರಕ್ಕೆ ಈ ಹುಡುಗನನ್ನು future star ಎಂದು ಬಿಟ್ಟರೆ ಅದು ಮೂರ್ಖತನವಾದೀತು. ಏಕೆಂದರೆ ಪ್ರೊಫೆಶನಲ್ ಕ್ರಿಕೆಟರ್’ಗಳಿಗೆ ಐಪಿಎಲ್’ನ ‘ಗದ್ದೆ ಪಿಚ್’ಗಳಲ್ಲಿ ರನ್ ಗಳಿಸುವುದು ಹೆಚ್ಚುಗಾರಿಕೆಯೇ ಅಲ್ಲ. ಭಾರತ ತಂಡಕ್ಕೆ ಆಯ್ಕೆಯಾಗಲು ಐಪಿಎಲ್ ಪ್ರದರ್ಶನವೂ ಮಾನದಂಡಗಳಲ್ಲಿ ಒಂದಾದರೂ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ skill, temperament, talent ಇದ್ದರಷ್ಟೇ survive ಆಗಲು ಸಾಧ್ಯ. ಅದಿಲ್ಲವೆಂದರೆ ‘ಮಿಂಚಿ ಮರೆಯಾದ ಕೊಳ್ಳಿ ದೆವ್ವ’ಗಳಂತಾಗುತ್ತಾರೆ ಅಷ್ಟೇ..
ಈ ಅಭಿಷೇಕ್ ಶರ್ಮಾ ಐಪಿಎಲ್ bully ಅಲ್ಲವೇ ಅಲ್ಲ. ಈತ ಸ್ಪೆಷಲ್ talent. ಜಿಂಬಾಬ್ವೆ ವಿರುದ್ಧ ಆಡಿದ ಇನ್ನಿಂಗ್ಸ್ ಹುಡುಗನ ವಿಶೇಷ ಪ್ರತಿಭೆಯ ಅನಾವರಣ ಅಷ್ಟೇ. ದೇಶೀಯ ಕ್ರಿಕೆಟ್’ನಲ್ಲಿ ಇಂತಹ ಹಲವಾರು ಇನ್ನಿಂಗ್ಸ್’ಗಳನ್ನು ಕಟ್ಟಿಯೇ ಈತ ಭಾರತ ತಂಡಕ್ಕೆ ಬಂದವನು. ಅದಕ್ಕೊಂದು ಉದಾಹರಣೆ, 2021ರಲ್ಲಿ ಮಧ್ಯಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ 42 ಎಸೆತಗಳಲ್ಲಿ ಬಾರಿಸಿದ್ದ ಶತಕ.

2018ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯನಾಗಿದ್ದ ಅಭಿಷೇಕ್ ಶರ್ಮಾನಿಗೆ ಕ್ರಿಕೆಟ್ ಪಟ್ಟುಗಳನ್ನ ಹೇಳಿ ಕೊಟ್ಟ ಗುರು ಯುವರಾಜ್ ಸಿಂಗ್.
ಕ್ರಿಕೆಟ್ ಆಸಕ್ತಿ ಹುಟ್ಟಲು ಕಾರಣ ತಂದೆ.. ಆ ಆಸಕ್ತಿಗೆ ಆಸರೆಯಾಗಿ ನಿಂತು ಪ್ರತೀ ಹೆಜ್ಜೆಯಲ್ಲೂ ಹುಡುಗನಿಗೆ ಮಾರ್ಗದರ್ಶನ ನೀಡಿದವರು ಯುವರಾಜ್ ಸಿಂಗ್. ಹೆಚ್ಚಾಗಿ ಯುವರಾಜನ ಜೊತೆಗೇ ಕಾಲ ಕಳೆಯುವ ಅಭಿಷೇಕ್, ಜಿಂಬಾಬ್ವೆಗೆ ಹೋಗುವ ಮುನ್ನ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ತನ್ನ ಕ್ರಿಕೆಟ್ ಗುರುವಿನ ಜೊತೆಗೇ ಕೂತು ವೀಕ್ಷಿಸಿದ್ದ..!
ಅಭಿಷೇಕ್ ಶರ್ಮಾ ಮತ್ತೊಬ್ಬ ಯುವರಾಜನಾಗುತ್ತಾನೆ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ. ಆದರೆ ಆತ ಇಡುತ್ತಿರುವ ಹೆಜ್ಜೆ, ಮೂಡಿಸುತ್ತಿರುವ ಭರವಸೆ ಮಾತ್ರ ದೊಡ್ಡದು.
ಇದು ಕಾಕತಾಳೀಯವೋ, ಮುಂದಿನ ದೊಡ್ಡ ಸಾಧನೆಗೆ ಮುನ್ನುಡಿಯೊ ಗೊತ್ತಿಲ್ಲ.. ರೋಹಿತ್ ಶರ್ಮಾ T20I ಕ್ರಿಕೆಟ್’ನಿಂದ ಮರೆಯಾದ ಬೆನ್ನಲ್ಲೇ ಮತ್ತೊಬ್ಬ ಶರ್ಮಾ ಎದ್ದು ಬಂದಿದ್ದಾನೆ..!